Friday 30 March 2012

ಯಾಕೋ..ಏನೋ...!


(ಹೊಸದಾಗಿ ಕೊಂಡ ಪೆನ್ನು ಹೇಗೆ ಬರೆಯುತ್ತೋ , ಇಲ್ಲವೋ ಅನ್ನುವ ಅಳುಕಿತ್ತು. ಸರ್, ಹಾಳೇ ಮೇಲೆ ಗೀಚಿ ನೋಡಿ, ಆಮೇಲೆ ತಗೋಳ್ಳಿ ಅಂತ ಅಂಗಡಿಯವ ಅಂದಕೊಟ್ಟ ತುಂಡು ಹಾಳೆಯಲ್ಲಿ ಹೊಸ ಪೆನ್ನಿನಿಂದ  ಗೀಚಿದ 5 ಸಾಲುಗಳು  ಹೀಗಿದ್ದವು. ಪೆನ್ನು ಇಷ್ಟವಾಯಿತು)



ಅವಳು ಇಷ್ಟಪಟ್ಟಳು
ನಾನು ಇಷ್ಟಪಟ್ಟೆ..
ಯಾಕೋ,ಏನೋ.. ಅದು ಸರಿಹೊಂದಲೇ ಇಲ್ಲ
ಸರಿಯಾಗುವ ಲಕ್ಷಣ ಕೂಡ ಕಾಣಲಿಲ್ಲ
ಅವಳು ದೂರ ಸರಿದಳು.
ನಾ ಸರಿಯಲಿಲ್ಲ.
ನನಗಿನ್ನೂ ಅವಳ ಗುಂಗು ಹೋಗಿಲ್ಲ
ನಾನು ಇನ್ನೂ ಅಲ್ಲೇ ನಿಂತಿದ್ದೇನೆ
ಮತ್ತೇ ಬರುವಳೇ
ಎಂಬುದಾಗಿ...


ಶಿಕಾರಿ ಮಿಸ್ ಆಯ್ತು..!



ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣನಾಯಕನಾಗಿ ಅಭಿನಯಿಸಿದ ಮಲಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಅಭಿನಯದ `ಶಿಕಾರಿ' ಬಿಡುಗಡೆಯ ಭಾಗ್ಯವನ್ನು ಕಂಡಿದೆ. ಪ್ರಶಸ್ತಿ ಪುರಸ್ಕೃತ
`ಗುಬ್ಬಚ್ಚಿಗಳು'ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಇಡೀ ಚಿತ್ರಕ್ಕೆ ಮುಮ್ಮಟ್ಟಿ ಬೇಕಿತ್ತೋ, ಅಥವಾ ಇಲ್ಲವೋ ಅಂತ ನಾವು ತರ್ಕ ಹಾಕಿ ನೋಡಿದಾಗ ಮುಮ್ಟಟ್ಟಿ ಬದಲು ನಮ್ಮ ಕನ್ನಡದಲ್ಲಿಯ ಯಾವುದಾದರೂ ಹೀರೋಗಳನ್ನು ಬಳಸಿಕೊಳ್ಳಬಹುದಿತ್ತು ಎಂಬುದನ್ನು  ಒಂದೇ ಮಾತಿನಲ್ಲಿ ಹೇಳಬಹುದು. ಇಲ್ಲವೇ ಕನ್ನಡದಲ್ಲಿರುವ ದೇವರಾಜ್ ರಂತಹ ಜನಪ್ರಿಯ ಗಡಸು ದನಿಯ ಕಲಾವಿದರು ಮುಮ್ಮುಟ್ಟಿ ಪಾತ್ರಕ್ಕೆ ದನಿ ನೀಡಬಹುದಿತ್ತು. ಚಿತ್ರದಲ್ಲಿ ಅದು ಆಗಲಿಲ್ಲಅದಕ್ಕೆ ಕಾರಣ ಕೂಡ ಸ್ಟಷ್ಟವಾಗಿದೆಮುಮ್ಮಟ್ಟಿ ಕನ್ನಡದಲ್ಲಿ ಮಾತನಾಡಲು ರಿಸ್ಕು ತೆಗೆದುಕೊಂಡಿದ್ದು, ಕೊನೆಪಕ್ಷ ಮಾತನಾಡಿಸಿದ್ದರೂ, ಡಬ್ಬಿಂಗ್ನಲ್ಲಿ ನಿರ್ದೇಶಕರು ಸ್ವಲ್ಪ ಹುಷಾರಾಗಿರಬೇಕಿತ್ತು.ಮುಮ್ಮಟ್ಟಿ ಕನ್ನಡ ಮಾತನಾಡುತ್ತಿದ್ದಾರೋ, ಮಲಯಾಳಂ ಮಾತನಾಡುತ್ತಿದ್ದಾರೋ ಎಂಬುದು ಅರ್ಥವಾಗುವುದೇ ಇಲ್ಲ. ಏಷ್ಟೋ ಸೀನ್ಗಳಲ್ಲಿ ಅವರು ಶಬ್ಗಗಳನ್ನು ನುಂಗಿ ಮಾತನಾಡುತ್ತಾರೆ. ಅವರು ಏನು ಹೇಳಿದರು ಅನ್ನುವುದೇ ಅರ್ಥವಾಗುವುದೇ ಇಲ್ಲ.  ಮುಮ್ಮಟ್ಟಿ ಮಾತನಾಡಿದ ಕನ್ನಡ,ನಮ್ಮ ಕನ್ನಡದವರಿಗೆ ಅರ್ಥವಾಗುವುದು ತುಂಬಾ ಕಷ್ಟ.  ಅದೇನಿದ್ದರೂ ಮಲಯಾಳಂ ಶೈಲಿಯಲ್ಲಿ ಕನ್ನಡ ಮಾತನಾಡುವ ಮಲ್ಲುಗಳಿಗೆ ಮಾತ್ರ ಅರ್ಥವಾದೀತು. ಹೆಚ್ಚಿನವರಿಗೆ ಇದು ಇಷ್ಟವಾಗಲೂಬಹುದು.
ಕಥೆಯಲ್ಲಿ ಬರುವ ಕೇರಳದ ಕ್ರಾಂತಿಕಾರಿ ಹೋರಾಟಗಾರ ಅರುಣ ಎಂಬುವವ ಕನ್ನಡನಾಡಿನ ಮಂಜುಕಡ್ಕ ಎಂಬ ಚಿಕ್ಕ ಊರಿನಲ್ಲಿ ಕ್ರಾಂತಿ ಹೋರಾಟಕ್ಕೆ ಕಾರಣನಾಗುತ್ತಾನೆ.. ಬ್ರಿಟೀಷರ ವಿರುದ್ಧ ಹೋರಾಡುತ್ತಾನೆ. ಕಥೆಯನ್ನು ಆಗಿನ ಕಾಲಘಟ್ಟಕ್ಕೂ ಈಗಿನ ಕಾಲಘಟ್ಟಕ್ಕೂ ಹೋಲಿಕೆ ಮಾಡಿ ನೋಡಿದಾಗ ಹೊರಗಿನವರ ದಬ್ಬಾಳಿಕೆಯನ್ನು ಈಗಿನ ಎಮ್ ಎನ್ ಸಿ ಕಲ್ಚರ್ ಇರೋ ಕಂಪನಿಗಳ ಮೂಲಕ ಹೇಳಿಸಿರುವುದು ಅರ್ಥಪೂರ್ಣವಾಗಿದೆ. ಅದು ಖಂಡಿತ ಅರ್ಥವಾಗುತ್ತೆ ಕೂಡ
ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ನಮ್ಮ ಕನ್ನಡನಾಡಿನ ವಾಸ್ತವ, ಮಲೆನಾಡು ಪ್ರಾಂತ್ಯದಲ್ಲಿ ಸಾಮಾನ್ಯವಾಗಿರುವ ಹುಲಿಬೇಟೆ, ಎಸ್ಟೇಟ್,ದೊಡ್ಡ ಮನೆ, ಆಳುಕಾಳು, ಶೋಷಣೆ ಎಲ್ಲವೂ ಸಿನಿಮಾ ಕಥೆಯಲ್ಲಿ ಸುಳಿದಾಡುತ್ತದೆ.

ನಿರ್ದೇಶಕ ಅಭಯಸಿಂಹ ಚಿತ್ರಕಥೆಯಲ್ಲಿ ತುಂಬಾ ಎಡವಿದ್ದಾರೆ.ಅದರಲ್ಲೂ ದ್ವೀತಿಯಾರ್ಧ ಜಾಸ್ತಿನೇ ಅಂತಾನೇ ಹೇಳಬಹುದು. ಎರಡು ಗಂಟೆಯಲ್ಲಿ ಸಿನಿಮಾ ಮುಗಿಸಬೇಕು ಅನ್ನುವ ಧಾವಂತ ಅವರನ್ನು ಕಾಡಿರಲೂಬಹುದು. ಹಾಗಾಗಿಯೇ ಚಿತ್ರದ ಫಿನಿಷಿಂಗ್ /ಕ್ಲೈಮಾಕ್ಸ್ ಬೇಗ ಮುಗಿದ ಹಾಗೆ ಅನಿಸುತ್ತೆ. ಅದರಲ್ಲೂ ನಿರ್ದೇಶಕರು ಪಾತ್ರಗಳ ನಿರೂಪಣೆ ಅಷ್ಟಾಗಿ ಗಂಭೀರವಾಗಿ ತೋರಿಸಿಲ್ಲ, ಕೊನೆಯವರೆಗೂ ನಂದಿತಾಳ ತಂದೆತಾಯಿ,ಅವಳ ಮನೆತನದ ಬಗ್ಗೆ ಗೊಂದಲಗಳು  ಕಾಣುತ್ತವೆ
      ಶಿಕಾರಿ ಕಥೆಯಲ್ಲಿ ಬರುವ ನೈಜ ಪಾತ್ರಗಳನ್ನು ಹುಡುಕಿಕೊಂಡು ಹೋಗುವ ನಾಯಕನ ಪಾತ್ರದಲ್ಲಿ ಮಿಂಚಿದ ಮುಮ್ಮಟ್ಟಿ  ಇಷ್ಟವಾಗಬಹುದು, ಇಷ್ಟವಾಗದೇನೂ
 ಇರಬಹುದು.  ಮುಮ್ಮಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು. ಅಭಿಜಿತ್ ಪಾತ್ರಗಿಂತ ಕ್ರಾಂತಿಕಾರಿ ಅರುಣನ ಪಾತ್ರ ಸ್ವಲ್ಪ ಗಟ್ಟಿಯಾಗಿ ಕಾಣುತ್ತದೆ. ಇಡೀ ಸಿನಿಮಾ ನೋಡಿದಾಗ ಕೆಲವರಿಗೆ(ನನ್ನನ್ನೂ ಸೇರಿಸಿಮುಮ್ಮಟ್ಟಿ ಇಷ್ಟವಾಗದೇ ಇರಲಿಕ್ಕೆ ಕಾರಣ, ಅವರ ಮಲಯಾಳಂ ಮಿಶ್ರಿತ ಕನ್ನಡ. ಇನ್ನು   ಹಿರೋಯಿನ್ ದೂ ಅದೇ ಕಥೆ. ನೋಡಲು ಮಲೆನಾಡಿನ  ಅಪ್ಪಟ ಸುಂದರಿಯಾಗಿ ಕಂಡರೂ ಅವಳದು ಕೂಡ ಭಾಷಾ ಸಮಸ್ಯೆ. ಹರಿಕೃಷ್ಣರ ಮ್ಯೂಸಿಕ್ ಥಿಯೇಟರ್ಗೆ ಮಾತ್ರ ಸೀಮಿತ. ನೈಜ ಹುಲಿಯನ್ನು ತಂತ್ರಜ್ಞಾನದ ಮೂಲಕ ತೆರೆಯ ಮೇಲೆ  ತೋರಿಸಿದ ನಿರ್ದೇಶಕರ ತಾಂತ್ರಿಕ ಜಾಣ್ಮೆಯನ್ನು ಮೆಚ್ಚಲೇಬೇಕು. ಕನ್ನಡದಲ್ಲಿ ಸಿನಿಮಾ ಏಷ್ಟರಮಟ್ಟಿಗೆ ನಿಲ್ಲುವುದೋ ಸ್ವಲ್ಪ ಕಷ್ಟಸಾಧ್ಯ.ಆದರೆ ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾ ಒಂದು ಮಟ್ಟಿಗೆ ನಿಲ್ಲಬಹುದು. ಇಡೀ ಸಿನಿಮಾದಲ್ಲಿ ಕನ್ನಡದ ನೇಟಿವಿಟಿಗಿಂತ ಕೇರಳದ ನೇಟಿವಿಟಿ ಜಾಸ್ತಿ ಎದ್ದು ಕಾಣುತ್ತದೆ.
ಒಟ್ಟಾರೆ ಶಿಕಾರಿ ಸಿನಿಮಾ ಸಾಮಾನ್ಯರಿಗೆ ಅಷ್ಟಾಗಿ ರುಚಿಸುವುದಿಲ್ಲ. ಕ್ಲಾಸ್ ಜನರಿಗೆ ಖಂಡಿತ ಇಷ್ಟವಾಗುತ್ತೆ. ಇಡೀ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಚ್ಯುತ, ನೀನಾಸಂ ಅಶ್ವಥ್ ತಮ್ಮ ಅಭಿನಯದಿಂದ ಹತ್ತಿರವಾಗುತ್ತಾರೆ. ಆದರೂ ಅಭಯಸಿಂಹರ ಹೊಸತನದ ತುಡಿತವನ್ನು ಮೆಚ್ಚಲೇಬೇಕು.ಕಾಸು ಸುರಿದ ಕೆ. ಮಂಜುರವರು ಕೂಡ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬೇಕು. ಸಾಲು ಸಾಲು ರಿಮೇಕ್ ಸಿನಿಮಾಗಳ ನಡುವೆ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ
 ಮುಮ್ಮಟ್ಟಿ ಕನ್ನಡ ಸಿನಿಮಾದಲ್ಲಿ ಹೇಗೆ ಅಭಿನಯಿಸಿದ್ದಾರೆ, ಹೇಗೆ ಮಲಯಾಳಂ ಶೈಲಿಯಲ್ಲಿ ಕನ್ನಡ ಮಾತನಾಡಿದ್ದಾರೆ ಅನ್ನುವ ಕುತೂಹಲ ಇದ್ದರೆ ಖಂಡಿತ ಶಿಕಾರಿ ಸಿನಿಮಾ ನೋಡಿ


ಇಡೀ ಸಿನಿಮಾದ ತಾಂತ್ರಿಕ ವರ್ಗ
ಶಿಕಾರಿ ಚಿತ್ರಕ್ಕೆ, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಮದನ್-ಹರಿಣಿ ನೃತ್ಯ ಸಂಯೋಜನೆ, ಅನಲ್ ಅರಸು ಸಾಹಸ ಸಂಯೋಜನೆ, ಎಸ್. ಮನೋಹರ್ ಸಂಕಲನ ಹಾಗೂ ವಿಕ್ರಂ ಶ್ರೀವಾಸ್ತವ ಛಾಯಾಗ್ರಹಣ ಇದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತ ಸಾಹಿತ್ಯವನ್ನು ರಚಿಸಿದ್ದಾರೆ. ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ, ಪೂನಂ ಬಾಜ್ವಾ, ಇನ್ನೊಸೆಂಟ್, ಸಿಹಿ ಕಹಿ ಚಂದ್ರು, ಅಚ್ಚುತ, ನೀನಾಸಂ ಅಶ್ವತ್, ಟಿನಿ ಟಾಂ, ಸುರೇಶ್ ಕೃಷ್ಣ, ನೀನಾಸಂ ಸತೀಶ, ಶರತ್ ಲೋಹಿತಾಶ್ವ, ನವೀನ್ ಡಿ. ಪಡೀಲ್, ಚಂದ್ರಹಾಸ ಉಳ್ಳಾಲ್, ಅಕ್ಕಿ ಚನ್ನಬಸ್ಸಪ್ಪ ಮುಂತಾದವರು ನಟಿಸಿದ್ದಾರೆ